ಸ್ವತಂತ್ರ ಭಾರತದ ಕರಾಳ ಅಧ್ಯಾಯ;
"ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧನಕ್ಕೊಳಗಾದ ಅಟಲ್ ಜಿ ಹಾಗೂ ಜಾರ್ಜ್ ಫರ್ನಾಂಡಿಸ್,ಪ್ರಜಾಪ್ರಭುತ್ವದ ಕರಾಳ ಅಧ್ಯಾಯದ ಸಂಕೇತಾತ್ಮಕ
ದೃಶ್ಯ."
"ಬೇಡಿಗಳು ಕೈಗಳನ್ನು ಕಟ್ಟಬಹುದು; ಆದರೆ ಸ್ವಾತಂತ್ರ್ಯದ ಸಂಕಲ್ಪವನ್ನು ಎಂದಿಗೂ ಕಟ್ಟಲಾರವು."
ಜೂನ್ ಇಪ್ಪತೈದರ ಕತ್ತಲ ರಾತ್ರಿಯಲಿ,
ಪ್ರಜಾಪ್ರಭುತ್ವದ ಬುನಾದಿಯೇ ನಡುಗಿತು;
ಸ್ವಾತಂತ್ರ್ಯದ ಕೊರಳನು ಹಿಸುಕಿದರು
ಸಂವಿಧಾನದ ಮನವು ಮೌನವಾಯಿತು ॥
ಮಾತಿನ ಹಕ್ಕಿಗೂ ಬೀಗವು ಬಿತ್ತು,
ಪತ್ರಿಕಾ ಸ್ವಾತಂತ್ರಕ್ಕೂ ಸರಪಳಿ ಸುತ್ತಿತು;
ಪ್ರಜಾಪ್ರಭುತ್ವದ ದಾರಿಯಲಿ ನಡೆದವರು,
ಬಂಧೀಖಾನೆಗಳ ಬಾಗಿಲು ಕಂಡರು ॥
ಪ್ರಜೆಗಳ ಹಕ್ಕಿನ ಪವಿತ್ರ ಪುಟಗಳಲಿ
ಅಧಿಕಾರದ ಅಹಂಕಾರ ತಲೆಯೆತ್ತಿ ನಿಂತಿತು;
ಪ್ರಜೆಗಳ ನಂಬಿಕೆಯ ನದಿಯ ಮೇಲೆಯೇ,
ಭಯದ ಕಾರ್ಮೋಡಗಳು ಆವರಿಸಿದವು ॥
ಇತಿಹಾಸ ನಮಗಿಂದು ಮೌನವಾಗಿ ಪಾಠ ಹೇಳುತ್ತದೆ,
ಸ್ವಾತಂತ್ರ್ಯದ ಬೆಲೆ ಸದಾ ಜಾಗೃತಿಯೇ;
ಸಂವಿಧಾನ ನಮ್ಮ ಉಸಿರು, ನಮ್ಮ ಬಲ,
ಪ್ರಜಾಪ್ರಭುತ್ವ ಇಲ್ಲಿ ನಿತ್ಯ ಜ್ಯೋತಿಯೇ ॥
ಜನತೆಯ ತೀರ್ಪನು ತುಳಿದು ಮುಂದೂಡುತ್ತ,
ಅಧಿಕಾರ ವ್ಯಾಮೋಹದಲಿ ದರ್ಪ ಮೆರೆದು;
ಕೊನೆಗೂ ಗೆಲುವಿನ ಭ್ರಮೆಯಲಿ,
ಅಂದು ಚುನಾವಣೆ ಘೋಷಣೆಯಾದವು ॥
ಆದರೇನು! ಮತಪೆಟ್ಟಿಗೆಯಲಿ ಜನಾಕ್ರೋಶ ಸಿಡಿಯಿತು,
ಮೌನದ ಭಾಷೆಯಲ್ಲೇ ಮಾತಾಡಿತು,
ಪ್ರಜಾಪ್ರಭುತ್ವದ ಜ್ಯೋತಿಯು,
ಫಳಫಳನೆ ಮತ್ತೊಮ್ಮೆ ಬೆಳಗಿತು ॥
ಅಧಿಕಾರ ಶಾಶ್ವತವೆಂಬ ಭ್ರಮೆ ಕಳಚಿ,
ಜನಾದೇಶದ ತೀರ್ಪಿನಲಿ ಕರಗಿಹೋಯಿತು;
ಪ್ರಜಾಸತ್ತೆಯ ಮುಂದೆ
ಅಹಂಕಾರ ದರ್ಪಗಳು ತಲೆ ಬಾಗಿದವು ॥
ಕರಾಳ ಪುಟಗಳು ಎಂದೂ ತೆರೆಯದಿರಲಿ,
ಮೂಲಭೂತ ಹಕ್ಕಿನ ಹೂಗಳು ಮತ್ತೆಂದೂ ಬಾಡದಿರಲಿ;
ಜನತೆಯ ಜಾಗೃತಿಯ ಕಾವಲಿನಲ್ಲಿ
ಭಾರತದ ಆತ್ಮ—ಪ್ರಜಾಸ್ವಾಮ್ಯ ಶಾಶ್ವತ ಬೆಳಗಿರಲಿ ॥
👉 ಸ್ವತಂತ್ರ ಭಾರತದ ಇತಿಹಾಸದ ಕರಾಳ ಅಧ್ಯಾಯದ ಮೆಲುಕು.
**
ಬರಹ:
✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

