ವಿಶೇಷ ವರದಿ:
50 ಕೋಟಿ ವೆಚ್ಚದ ತಾಯಿ ಮತ್ತು ನವಜಾತ ಶಿಶು ಆಸ್ಪತ್ರೆ: ಶಂಕುಸ್ಥಾಪನೆಯಾಯ್ತು, ಲೋಕಾರ್ಪಣೆಯಾಯ್ತು, ಆದರೆ ರೋಗಿಗಳಿಗೆ ಸಿಗುತ್ತಿಲ್ಲ ಚಿಕಿತ್ಸೆ!;
ಕುಷ್ಟಗಿ: ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣದಲ್ಲಿ ನಿರ್ಮಾಣಗೊಂಡ ಸುಸಜ್ಜಿತ
ಆಸ್ಪತ್ರೆಗಳು ಬಾಗಿಲು ತೆರೆಯದೆ ಧೂಳು ತಿನ್ನುತ್ತಿರುವ ಪ್ರಕರಣಗಳಿಗೆ ಈಗ ಕುಷ್ಟಗಿಯ ತಾಯಿ
ಮತ್ತು ನವಜಾತ ಶಿಶುಗಳ ಆಸ್ಪತ್ರೆಯೂ ಸಾಕ್ಷಿಯಾಗಿದೆ. ಸುಮಾರು 50 ಕೋಟಿ ರೂಪಾಯಿಗಳ ಬೃಹತ್ ಅನುದಾನದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆ, ಇಂದು ಆಡಳಿತ ವರ್ಗದ ನಿಷ್ಕಾಳಜಿಗೆ ಮೌನ ಸಾಕ್ಷಿಯಾಗಿ ನಿಂತಿದೆ.
ಮುಖ್ಯಮಂತ್ರಿಗಳ ಲೋಕಾರ್ಪಣೆಯೂ ವ್ಯರ್ಥ!; ಸುಮಾರು ಆರು ತಿಂಗಳ ಹಿಂದೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈ ಆಸ್ಪತ್ರೆಯನ್ನು
ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿದ್ದರು. ರಾಜ್ಯದ ಮುಖ್ಯಮಂತ್ರಿಯೇ ಉದ್ಘಾಟಿಸಿದ ಆಸ್ಪತ್ರೆಯು
ತಕ್ಷಣ ಕಾರ್ಯಾರಂಭಗೊಳ್ಳಬೇಕಿತ್ತು. ಆದರೆ, ಇಂದಿನವರೆಗೂ ಆಸ್ಪತ್ರೆಯು
ರೋಗಿಗಳಿಗೆ ಲಭ್ಯವಿಲ್ಲದಿರುವುದು ಈ ಭಾಗದ ಜನಸಾಮಾನ್ಯರಿಗೆ ಅನ್ಯಾಯವೆಸಗಿದಂತಾಗಿದೆ.
ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೌನವೇಕೆ?; ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ (DHO)
ಗಮನಕ್ಕೆ ಈ ವಿಷಯವನ್ನು ಹಲವು ಬಾರಿ ತರಲಾಗಿದೆ. ಸುಮಾರು 20 ದಿನಗಳ ಹಿಂದೆ ಸಂಸದರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ವ್ಯವಹಾರದ ಮೂಲಕ ಆಸ್ಪತ್ರೆ
ಕಾರ್ಯಾರಂಭಕ್ಕೆ ಒತ್ತಾಯಿಸಲಾಗಿದ್ದರೂ, ಆಡಳಿತ ಯಂತ್ರದ ಚಲನೆ ಮಾತ್ರ
ಶೂನ್ಯವಾಗಿದೆ.
ಕಾಣದ ಕೈಗಳ ಹಿತಾಸಕ್ತಿಯೇ?; ಈ ಆಸ್ಪತ್ರೆಯು ಕಾರ್ಯಾರಂಭಗೊಳ್ಳದಿರಲು 'ಕಾಣದ ಕೈಗಳ' ಹಿತಾಸಕ್ತಿ ಅಡಗಿದೆಯೇ ಎಂಬ ಅನುಮಾನ
ಸಾರ್ವಜನಿಕರಲ್ಲಿ ದಟ್ಟವಾಗಿದೆ. ಸೌಲಭ್ಯಗಳಿದ್ದರೂ ಆಸ್ಪತ್ರೆ ಬಾಗಿಲು ತೆರೆಯದಂತೆ
ಅಡ್ಡಿಪಡಿಸುತ್ತಿರುವ ಶಕ್ತಿಗಳು ಯಾವುವು? ಈ ಬಗ್ಗೆ ಜಿಲ್ಲಾಡಳಿತ
ಸ್ಪಷ್ಟನೆ ನೀಡಬೇಕಿದೆ.
ಆಕ್ರೋಶಕ್ಕೆ ಸಾಕ್ಷಿಯಾದ ಆಸ್ಪತ್ರೆ; ಕುಷ್ಟಗಿಯ ಬಡ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ದೊರೆಯಲಿ ಎಂಬ
ಉದ್ದೇಶದಿಂದ ನಿರ್ಮಿಸಲಾದ ಈ ಆಸ್ಪತ್ರೆಯು, ಇಂದು ಅಧಿಕಾರಿಗಳ ಮತ್ತು
ಜನಪ್ರತಿನಿಧಿಗಳ ನಿಷ್ಕಾಳಜಿಗೆ ಕನ್ನಡಿಯಾಗಿ ನಿಂತಿದೆ. ಈ ಆಸ್ಪತ್ರೆ ತಕ್ಷಣ
ಕಾರ್ಯಾರಂಭಗೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆಗೆ
ಸಾರ್ವಜನಿಕರು ಸಿದ್ಧರಾಗಬೇಕಾಗುತ್ತದೆ.
ವರದಿ:
- ಕಿರಣ್ ದಾನಿ, ಸಂಪಾದಕರು, ರಣಗಲ್ ನ್ಯೂಜ್. © ಸರ್ವ ಹಕ್ಕು ಕಾಯ್ದಿರಿಸಲಾಗಿದೆ.
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

.jpeg)